Monday, April 21, 2008

ಗೆಳೆಯನ ಮನೆ ಆತಿಥ್ಯ


ಕಡಿಗೆ ತಮ್ಮಾ ಹೇಂಗಿದ್ದೆ ಆರಾಮವಾ? 'ಹಾ ಆರಾಮ್'. ಬರ್ತಾ ದಾರಿ ಮಧ್ಯೆ ಏನಾದ್ರೂ ತ್ರಾಸಾತು? 'ಇಲ್ಲ'. ಅಷ್ಟು ದೂರದಿಂದ್ ಪ್ರಯಾಣ ಮಾಡ್ ಬಂದು ಸುಸ್ತಾಗಿರ್ಬೇಕು, ಹೋಗ್ ರೆಸ್ಟ್ ತಗೊಳ್ಳಿ. 'ಇಲ್ಲ, ಇಲ್ಲ, ಬೇಡ'.
ಕನ್ಫ್ಯೂಸ್ ಆಗ್ಬೇಡಿ. ಮೊನ್ನೆ ಗೆಳೆಯ ರಾಜೀವ್ ಹೆಗಡೆ ಮನೆಗೆ ಹೋಗಿದ್ದೆ ಆಲ್ಲಿನ ಕೆಲವು ಸಂಭಾಷಣೆಗಳಿವು. ಅದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಒಂದು ಪುಟ್ಟ ಹಳ್ಳಿ. ಆ ಹಳ್ಳಿಯ ಹೆಸರು ಕೆಳಗಿನಸಸಿ. ಅಲ್ಲಿ ಗೊದ್ಲಮನೆ ಎಂಬುದು ಗೆಳೆಯನ ಮನೆ ಹೆಸರು. ದಕ್ಷಿಣಕನ್ನಡ ಉಜಿರೆಯಿಂದ ರಾತ್ರಿ ಸುಮಾರು 10 ಗಂಟೆಗೆ ಶಿವಮೊಗ್ಗ ಬಸ್ಸು ಹತ್ತಿ ಕುಳಿತಿದ್ದೇವೆ. ಚಾರ್ಮಾಡಿ ಘಾಟಿಯೊಂದು ಶಿವಮೊಗ್ಗದವರೆಗೂ ಕಾಡಿದ್ದು! ಬಿಟ್ಟರೆ ಬೇರೇನೂ ತೊಂದರೆ ಕಾಣಿಸಲಿಲ್ಲ. ಸುಮಾರು 4 ಗಂಟೆ ಹೊತ್ತಿಗೆ ಶಿವಮೊಗ್ಗದಲ್ಲಿ ಇಳಿದಾಗಲೇ ಸರಿಯಾಗಿ ಎಚ್ಚರವಾಗಿದ್ದು. ಅಲ್ಲಿ 1 ಗಂಟೆ ಸಿದ್ದಾಪುರ ಬಸ್ಸಿಗಾಗಿ ಕಾದು ಕಾದು ಸುಸ್ತೋ ಸುಸ್ತು, ಶಿವಮೊಗ್ಗ ಬಸ್ಸು ನಿಲ್ದಾಣದಲ್ಲಿ ನಿಂತು ಅತ್ತಿಂದಿತ್ತ ನೋಡುತ್ತಿದ್ದ ನನ್ನ ಕಣ್ಣುಗಳಿಗೆ ಕಾಣಿಸಿದ್ದು ಆ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಮಲಗಿ ನಿದ್ರಿಸುತ್ತಿದ್ದ ಜನ. ಬೆಳಗಿನಜಾವದ ಸಮಯ ಸುಮಾರು 4.50 ಇದ್ದಿರಬಹುದು, ಬೆಳಗಿನ್ಜಾವದ ಸಿಹಿ ನಿದ್ರೆಯಲ್ಲಿ ಸಿಹಿಗನಸು ಕಾಣುತ್ತಾ ಮಲಗಿದ ಆ ಜನರನ್ನು ಪೋಲೀಸ್ ಪೇದೆಯೊಬ್ಬ ತನ್ನ ಉದ್ದನೆಯ ಲಾಠಿಯಿಂದ ಮೆತ್ತಗೆ ಏಟೊಂದನ್ನು ಬಿಗಿಯುತ್ತಾ ಎಚ್ಚರಗೊಳಿಸುತ್ತಿದ್ದ. ಬಹುಶಃ ಅಲ್ಲಿ ಮಲಗಿದಂತಹ ಜನಕ್ಕೆ ಅದುವೇ ಬೆಳಗಿನಜಾವದ ಸುಪ್ರಭಾತವೇನೋ!. ಅದೋ ಸಿದ್ದಾಪುರ ಬಸ್ಸು ಬಂತು ಹೋಗೋಣ ಬಾ ಅಂದಾಗ ಅದ್ಯಾವುದೋ ಯೋಚನಾ ಲಹರಿಯಲ್ಲಿದ್ದ ನನಗೆ ಕೂಡಲೇ ಏಚ್ಚರವಾಯ್ತು.

ಸಿದ್ದಾಪುರ ಎಂಟ್ರಿ
ಸಿದ್ದಾಪುರ ಪೇಟೆ ಹೊಕ್ಕಿದ್ದೇ ತಡ ಹಸಿರು ತೋರಣಗಳು ಹಸಿರು ಧ್ವಜಗಳು ನನ್ನನ್ನ ಸ್ವಾಗತಿಸಿದವು. ಅತ್ತ ಘಾಟಿಯೂ ಅಲ್ಲದ ಇತ್ತ ಬಯಲು ಪ್ರದೇಶವೂ ಅಲ್ಲದ ಉತ್ತರಕನ್ನಡ ಸಿದ್ದಾಪುರದ ಮಣ್ಣನ್ನು ಮೆಟ್ಟಿದ್ದೇ ಮೆಟ್ಟಿದ್ದು ಮೈಯಲ್ಲೇನೋ ಒಂಥರಾ ಹೊಸತನದ ಪುಳಕ. ಅಲ್ಲಿನ ಬಸ್ಸು ನಿಲ್ದಾಣವೇನೋ ಚೆನ್ನಾಗೇ ಇತ್ತು, ಆದರೆ ಬಸ್ಸುಗಳಲ್ಲ. ಬಹುಶಃ ಆ ಬಸ್ಸುಗಳು ಕರ್ನಾಟಕದಾದ್ಯಂತ ಉಪಯೋಗಗೊಂಡು, ಇನ್ನೇನು ತೀರಾ ಹದಗೆಟ್ಟು ಉಪಯೋಗಕ್ಕೂ ಬಾರದ ಸ್ಥಿತಿಯಲ್ಲಿನ ಎಲ್ಲಾ ಬಸ್ಸುಗಳನ್ನೂ ಅಲ್ಲಿನ ಹಳ್ಳಿಗಳಿಗೆ ಬಿಟ್ಟಿದ್ದಾರೇನೋ ಎಂದೆನಿಸಿದರೆ ಅದಕ್ಕೆ ಆಶ್ಚರ್ಯಪಡಬೇಕಿಲ್ಲ!

ಊರ ಹೆಸರುಗಳೇ ಒಂಥರಾ ಥ್ರಿಲ್
ದಾನಮಾಂವ, ಮೆಣಸಿ, ಮಾವಿನಗುಂಡಿ, ಹೆಗಡೆಕಟ್ಟಾ, ಹಾರ್ಸಿಕಟ್ಟಾ, ಸಂಪಖಂಡ, ಬೆಳ್ಳೆಮಡಕೆ, ಬೇಡ್ಕಣಿ, ಹೊನ್ನೆಘಟಗಿ, ಲಂಬಾಪುರ, ವಂದಾನೆ, ಗೊದ್ಲಮನೆ, ಜಟಗಿನಮನೆ, ದೊಡ್ಮನೆ, ಕಾನ್ಮನೆ, ಕಲಕೈ, ಜಗಳೆಮನೆ, ಕ್ಯಾದಗಿ, ಹೀಗೇ ಮೊದಲಾದ ಊರುಗಳ ಆ ಹೆಸರುಗಳಲ್ಲಿ ಏನೇನು ಅರ್ಥಗಳನ್ನಿಟ್ಟುಕೊಂಡಿದೆಯೋ ಏನೋ. ಅವುಗಳ ಅರ್ಥಗಳನ್ನು ಹುಡುಕುತ್ತಾ ಹೋದಲ್ಲಿ ಹಲವು ರೋಚಕ ಕಥೆಗಳಂತೂ ನಮ್ಮನ್ನು ಬಿಡದಂತೆ ಕಾಡುವುದಂತೂ ಸತ್ಯ. ಮತ್ತೊಂದು ಹೆಸರು ಬಂಕೇಶ್ವರ ದೇವಸ್ಥಾನ. ನನಗೆ ಈ ಹೆಸರು ಬಹಳವಾಗಿ ಕಾಡಿದ್ದು ಏಕೆಂದರೆ ಅದೇ ಹೆಸರಿನ ಶಾಲೆಯೂ ಅಲ್ಲಿದೆ. ಮನಸ್ಸಿನಲ್ಲಿದ್ದ ಯೋಚನೆಯೆಂದರೆ ಈ ಶಾಲೆಯಲ್ಲಿನ ವಿದ್ಯಾರ್ಥಿಗಳು ಬಂಕ್ ಹೊಡೆಯುತ್ತಾರೋ ಇಲ್ಲವೋ ಎಂದು.

ಅಂತೂ ಇಂತು ಮನೆ ಬಂತು
ಅಂತೂ ಗೆಳೆಯನ ಮನೆ ತಲುಪಿದ್ದಾಯಿತು. ಅಲ್ಲಿ ನಿಜಕ್ಕೂ ಆಶ್ಚರ್ಯವೆನಿಸಿದ ಸಂಗತಿಯೆಂದರೆ ಅಲ್ಲಿನವರ ಆತ್ಮೀಯತೆ ಮತ್ತು ಅತಿಥಿ ಸತ್ಕಾರ ಅದೆಲ್ಲಾ ಒಂಥರಾ ಗ್ರೇಟ್. ಮತ್ತೊಂದು ವಿಷಯ ಅಲ್ಲಿ ಕಂಡಂತದ್ದು ಅಲ್ಲಿನವರ ಸಂಸ್ಕೃತಿ, ಆ ಹಳ್ಳಿಗಳಲ್ಲಿ ಸಂಸ್ಕೃತಿ ಇನ್ನೂ ಉಳಿದುಕೊಂಡಿದೆ. ದೇಶದಲ್ಲೆಲ್ಲಾ ಜಾಗತೀಕರಣದ ಅಲೆಯಿದ್ದರೂ ತಮ್ಮ ಮೂಲ ಸಂಸ್ಕೃತಿಯನ್ನು ಅವರು ಬಿಟ್ಟಿಲ್ಲ.
ಇನ್ನುಳಿದಂತೆ ಅಲ್ಲಿ ಇಲ್ಲಿ ತಿರುಗಾಟ
ಹುಟ್ಟಿದ್ಮೇಲೆ ಸಾಯೋದ್ರೊಳಗೆ ನೋಡು ಒಮ್ಮೆ ಜೋಗ ಗುಂಡಿ, ಹೇಗಿದ್ರೂ ಗೆಳೆಯನ ಮನೆ ತನಕ ಬಂದಾಗಿದೆ. ಅಲ್ಲಿಂದ ಸುಮಾರು 20 ಕಿ.ಮೀ ಕ್ರಮಿಸಿದಲ್ಲಿ ವಿಶ್ವವಿಖ್ಯಾತ ಜೋಗ್ ಫಾಲ್ಸ್ ಸಿಗುತ್ತೆ ಆದ್ರಿಂದ ಅಲ್ಲಿಗೂ ಹೋಗಿ ಬಂದಿದ್ದಾಯಿತು ಆದರೆ ಒಂದು ಬೇಸರದ ಸಂಗತಿಯೆಂದರೆ ಫಾಲ್ಸ್ನಲ್ಲಿ ನೀರೇ ಇರಲಿಲ್ಲ ಎಂಬುದು. ಸರಿ ಬಿಡಿ ಜೋಗದ ಗುಂಡಿಗಾದರೂ ಹೋಗೋಣವೆಂದರೆ ಅಲ್ಲಿನ ಅಭಿವೃದ್ಧಿ ಕಾರ್ಯದ ನೆಪದಿಂದಾಗಿ ಅಲ್ಲಿಗೆ ಪ್ರವೇಶ ನಿಷೇಧಿಸಲಾಗಿತ್ತು. ನಂತರ ಇನ್ನೊಂದು ದಿನ ಯಾಣಕ್ಕೆ ಹೋಗಿದ್ದಾಯಿತು ಆದರೆ ಅಲ್ಲೂ ಅಭಿವೃದ್ಧಿ ಕಾರ್ಯದ ನೆಪದಿಂದಾಗಿ ಯಾಣದಲ್ಲಿನ ಚೂಪು ಚೂಪಾದ ಬೃಹತ್ ಸರಿಯಾಗಿ ಬಂಡೆಗಳನ್ನು ನೋಡಲಾಗಲಿಲ್ಲ.
ಏನೇ ಆದರೂ ಗೆಳೆಯನ ಮನೆಯ ಭರ್ಜರಿ ಆತಿಥ್ಯವನ್ನಂತೂ ಮರೆಯಲು ಸಾಧ್ಯವೇ ಇಲ್ಲ. ಹೇಯ್ ಗೆಳೆಯ ನಿಮ್ಮ ಮನೆಯಲ್ಲಿ ಸವಿಯೂಟವ ಉಣಿಸಿ ಸಿಹಿನೆನಪುಗಳ ಜೋಳಿಗೆಯನ್ನು ಕಟ್ಟಿಕೊಟ್ಟಿದ್ದಕ್ಕೆ ಧನ್ಯವಾದಗಳು. ಇನ್ನು ನಮ್ಮ ಮನೆಗೆ ಬರೋದು ನಿಮ್ಮ ಸರದಿ. ಖಂಡಿತಾ ಬರಲೇ ಬೇಕು.

Read more...

About This Blog

  © Blogger template Valentine by Ourblogtemplates.com 2008

Back to TOP